
ಪರೀಕ್ಷಾ ಫಲಿತಾಂಶದ ಜೊತೆ ಸಾಮಾಜಿಕ ಜೀವನದ ಫಲಿತಾಂಶವೂ ಅಷ್ಟೇ ಮುಖ್ಯವಾಗಲಿ
ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
100ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಎಂದು ಮುಖ್ಯಮಂತ್ರಿ ಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಕರ್ ಹೇಳಿದರು.
ಜಿಲ್ಲೆಯ ಮಲೈಮಹದೇಶ್ವರ ಬೆಟ್ಟದ ನಾಗಮಲೆ ಭವನ ಹೊರ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹನೂರು ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ವೃತ್ತಿ ಮತ್ತು ಬದುಕಿನ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದು ಹೆಚ್ವಿನ ಒತ್ತು ನೀಡಿದ್ದಾರೆ. ಉಳಿದ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂದರು.
ಜು. 1 ಕ್ಕೆ ಪತ್ರಕರ್ತರಿಗೆ ಉಚಿತ ಬಸ್ ಪಾಸ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ವೃತ್ತಿ ಮತ್ತು ಬದುಕಿನ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಜುಲೈ 1 ಕ್ಕೆ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಅಲ್ಲದೆ 5 ಲಕ್ಷ ರೂಪಾಯಿ ವರೆಗಿನ ಆರೋಗ್ಯ ಚಿಕಿತ್ಸಾ ವೆಚ್ಚವನ್ನು ಒದಗಿಸುವ ಪತ್ರಕರ್ತರ ಆರೋಗ್ಯ ಕಾರ್ಡ್ ವ್ಯವಸ್ಥೆಯನ್ನೂ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಆರೋಗ್ಯ ಸಂಜೀವಿನಿ ಕಾರ್ಡ್ ಕೂಡ ಜುಲೈ 1 ರಂದು ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪತ್ರಕರ್ತರ ಭವನ ಮತ್ತು ತಾಲ್ಲೂಕು ಪತ್ರಕರ್ತರ ಭವನದ ನಿರ್ಮಾಣಕ್ಕೂ ಸರ್ಕಾರದ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭೆ ಅಂದರೆ ಕೇವಲ ಪರೀಕ್ಷಾ ಫಲಿತಾಂಶ ಅಲ್ಲ. ಜ್ಞಾನ ಮತ್ತು ನಿರಂತರ ಸಾಧನೆ ಮತ್ತು ನೀವು ಪಟ್ಟ ಪರಿಶ್ರಮ ಮೂರೂ ಬೆರೆತ ಮಿಶ್ರಣ. ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಎಲ್ಲಾ ಮಕ್ಕಳಿಗೂ ಎಲ್ಲಾ ಪೋಷಕರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಇವತ್ತು ಶಿಕ್ಷಣ, ವ್ಯವಸ್ಥೆ ಹೇಗಾಗಿದೆ, ಎಷ್ಟು ದುಬಾರಿ ಆಗಿದೆ ಎಂದರೆ, ಪೋಷಕರು ಸದಾ ಮಕ್ಕಳ ಶಿಕ್ಷಣದ ಬಗ್ಗೆಯೇ ಯೋಚಿಸುವಂತಾಗಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಪೋಷಕರು ತಮ್ಮ ಅಗತ್ಯ ಮತ್ತು ಅನುಕೂಲಗಳ ಜೊತೆ ರಾಜಿ ಮಾಡಿಕೊಳ್ಳುತ್ತಾರೆ. ಪೋಷಕರ ಈ ತಪಸ್ಸಿಗೆ ಸಾರ್ಥಕತೆ ಬರುವುದು ಅವರ ಮಕ್ಕಳು ಸಾಧನೆ ಮಾಡಿದಾಗ, ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಕಣ್ಣಲ್ಲಿ ಕಾಣುವ ಪೋಷಕರಿಗೆ ಇದಕ್ಕಿಂತ ದೊಡ್ಡ ಸಮಾಧಾನ ಬೇರೆ ಇರುವುದಿಲ್ಲ. ಜೊತೆಗೆ ಮಕ್ಕಳು ಪರಿಶ್ರಮದಿಂದ ಕಲಿತರೆ ಪೋಷಕರ ಮೇಲಿನ ಆರ್ಥಿಕ ಹೊರೆಯೂ ಕಡಿಮೆ ಆಗುತ್ತದೆ. ಆರ್ಥಿಕ ಹೊರೆ ಕಡಿಮೆ ಇದ್ದಾಗ ಸಹಜವಾಗಿ ಪೋಷಕರ ಆರೋಗ್ಯ ಮತ್ತು ಮನೆಯ ಆರೋಗ್ಯವೂ ಚನ್ನಾಗಿರುತ್ತದೆ. ಹೀಗಾಗಿ SSLC ಮತ್ತು PUC ದಾಟಿದ ನಿಮ್ಮಗಳ ಮೇಲೆ ಪೋಷಕರನ್ನು ಖುಷಿಯಾಗಿಡುವ ಜವಾಬ್ದಾರಿ ಇರುತ್ತದೆ. ನಿಮ್ಮ ಪರಿಶ್ರಮ ಮತ್ತು ಜ್ಞಾನದಾಹ ಹಾಗೂ ಕಲಿಕೆಯ ಹಸಿವು ಹೆಚ್ಚಾಗಬೇಕು. ಈ ದಾಹ ಮತ್ತು ಹಸಿವು ನಿಮಗೆ ಜ್ವರದಂತೆ ಕಾಡಬೇಕು. ಒಂದು, ನಮ್ಮ ಎಲ್ಲಾ ಸಾಧನೆಗಳಿಗೂ ನಾವು ಬದುಕುತ್ತಿರುವ ಸಮಾಜದ ಕೊಡುಗೆ ಇರುತ್ತದೆ.
ಸಮಾಜ ಎಂದರೆ ಶರೀರ ಇದ್ದ ಹಾಗೆ. ನಾವು ಈ ಶರೀರದೊಳಗೆ ಬದುಕುತ್ತಿದ್ದೇವೆ. ನಾವು ಇರುವ ಶರೀರವನ್ನು ಕಟ್ಟುಮಸ್ತಾಗಿ, ಆರೋಗ್ಯಕರವಾಗಿ, ಆನಂದಮಯವಾಗಿ ಇಟ್ಟುಕೊಳ್ಳುವುದೇ ನಮ್ಮ ಪ್ರತಿಭೆಗೆ, ನಮ್ಮ ಸಾಧನೆಗೆ ಸಿಗುವ ನಿಜವಾದ ಪುರಸ್ಕಾರ ಎಂದು ಭಾವಿಸುತ್ತೇನೆ.
ಎರಡು, ಇಂದು ಸಮಾಜದಲ್ಲಿ ಭ್ರಷ್ಟಾಚಾರ ಇರುವುದಕ್ಕೆ ಮುಖ್ಯ ಕಾರಣ ಆರೋಗ್ಯ ಮತ್ತು ಶಿಕ್ಷಣ ಅತ್ಯಂತ ದುಬಾರಿ ಆಗಿರುವುದೇ ಕಾರಣ ಆಗಿದೆ. ಮಕ್ಕಳ ಓದಿನ ಖರ್ಚು, ಹಿರಿಯರ ಆಸ್ಪತ್ರೆ ಖರ್ಚು ನಮ್ಮ ನಿದ್ದೆಗೆಡಿಸುತ್ತದೆ. ಸಮಾಜದಲ್ಲಿ ಇದು ಬದಲಾಗಬೇಕು. ಈ ಬದಲಾವಣೆಗೆ ಪೂರಕವಾಗಿ ನೀವುಗಳು ವಿದ್ಯಾರ್ಥಿ ಜೀವನದಿಂದಲೇ ಯೋಚಿಸಬೇಕು. ನಾವು ಬದುಕುತ್ತಿರುವ ಸಮಾಜವೆಂಬ ಈ ಶರೀರ ಇನ್ನಷ್ಟು ಆನಂದವಾಗಿರಲು, ಇನ್ನಷ್ಟು ಆರೋಗ್ಯಕರವಾಗಿರಲು ನಾವೇನು ಮಾಡಬೇಕು ಎನ್ನುವ ದಿಕ್ಕಿನಲ್ಲಿ ಸದಾ ಚಿಂತನಾಶೀಲರಾಗಿರಬೇಕು. ಈ ಚಿಂತನಶೀಲತೆ ನಮ್ಮ ಜ್ಞಾನ ದಾಹ ಮತ್ತು ವಿವೇಕದ ಹಸಿವನ್ನು ಹೆಚ್ಚಿಸುತ್ತದೆ.
ಈ ಎರಡು ಸಂಗತಿಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳುವುಕ್ಕಾಗಿ ಮತ್ತು ಪೋಷಕರನ್ನು ವೃದ್ದಾಶ್ರಮಗಳಿಗೆ ಕಳುಹಿಸದಂತೆ ನಾವು ಜವಾಬ್ದಾರರಾಗಬೇಕು ಎನ್ನುವ ನನ್ನ ಕೋರಿಕೆಗಳನ್ನು ನಿಮ್ಮ ಮುಂದೆ ಇಡಲು ನಾನು ಇಲ್ಲಿಗೆ ಬಂದಿದ್ದೇನೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸತತ ಐದನೇ ವರ್ಷ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿದೆ. ಇದಕ್ಕಾಗಿ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪದಾಧಿಕಾರಿಗಳನ್ನೂ ನಾನು ಅಭಿನಂದಿಸುತ್ತೇನೆ ಎಂದರು.
ಪತ್ರಕರ್ತರ ಬೇಡಿಕೆ ಈಡೇರಿಸಲು ಕ್ರಮ: ಕಾರ್ಯಕ್ರಮ ಉದ್ಘಾಟಿಸಿದ
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಪತ್ರಕರ್ತರ ಬೇಡಿಕೆಗೆ ಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮವಹಿ ಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದವಧಿಯಲ್ಲಿ ಇದ್ದಾಗ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮನವಿ ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಚಾಮರಾಜನಗರ ಜಿಲ್ಲೆಯು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ತೆಗೆಯಲು ಮಹದೇಶ್ವರಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು. ಸುಮಾರು 3 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ತಿಳಿಸಿದರು. ಸ್ವಾತಂತ್ರ್ಯ ಬಂದು 75 ವರ್ಷಗಳಾದರು ಜಿಲ್ಲೆಯ ಅನೇಕ ಹಾಡಿಗಳಿಗೆ ವಿದ್ಯುತ್, ರಸ್ತೆ ಇರಲಿಲ್ಲ. ಆದರೆ ಈಗ ಅನೇಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು.
100ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆದ 100ಕ್ಕೂ ಹೆಚ್ಚು ಮಕ್ಕಳಿಗೆ ನೆನಪಿನ ಕಾಣಿಕೆ, ಬ್ಯಾಗ್, ಪ್ರಮಾಣಪತ್ರ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಲೂರು ಮಠದ ಶ್ರೀಶಾಂತಕಾರ್ಜುನ ಸ್ವಾಮೀಜಿ, ಶಾಸಕರಾದ ಎಂ.ಆರ್.ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಬಿ.ಟಿ.ಕವಿತಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜ ಕಪ್ಪಸೋಗೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೊಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪ್ರಸಾದ್ ಲಕ್ಕೂರು, ಹನೂರು ತಾಲೂಕು ಅಧ್ಯಕ್ಷ ಮಹಾದೇಶ್, ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಬಿಜೆಪಿ ಮುಖಂಡರಾದ ನಿಶಾಂತ್, ಬಾಲಭವನದ ನಾಯ್ಡು ಇತರರು ಹಾಜರಿದ್ದರು.